ಬೇರೊಂದು ಉಪಗ್ರಹದಲ್ಲಿ ಕಾಲಿಡಲು ಹೊರಟಿರುವ ಮಾನವ, ಸಾಂಕ್ರಾಮಿಕ ರೋಗಗಳನ್ನು ತಡೆಯಲು ಇನ್ನೂ ಶತಾಯಗತಾಯ ಪ್ರಯತ್ನಿಸುತ್ತಲೇ ಇದ್ದಾನೆ. ಆದರೂ ಮಲೇರಿಯಾ, ಕ್ಷಯ, ಟೈಫಾಯ್ಡ್, ದಡಾರ, ಕುಷ್ಟ ಮುಂತಾದ ಸೋಂಕು ರೋಗಗಳನ್ನು ಜಗತ್ತಿನಿಂದ ಹೊಡೆದೊಡಿಸಲಾಗಿಲ್ಲ. ಅವು ಸಾಲದೆಂಬಂತೆ ಏಡ್ಸ್, ಎಬೋಲ, ಚಿಕುನ್ ಗುನ್ಯಾಗಳಂಥ ಸೋಂಕುಗಳ ಕಾಟ ಇತ್ತೀಚೆಗೆ ಹೆಚ್ಚಾಗಿದೆ. ಈಗ ಡೆಂಗ್ಯೂ ಜ್ವರವಂತೂ ಭಾರತ ಸೇರಿದಂತೆ ಇಡೀ ವಿಶ್ವವನ್ನೇ ನಡುಗಿಸಿದೆ.
ಡೆಂಗ್ಯೂ ಇಂದು ನೂರಕ್ಕೂ ಹೆಚ್ಚು ದೇಶಗಳಲ್ಲಿ ಹರಡಿಕೊಂಡಿದೆ. ವಿಶ್ವದಲ್ಲಿ ವಾರ್ಷಿಕ 5 ಕೋಟಿ ಜನರು ಡೆಂಗ್ಯೂ ಜ್ವರ ಪೀಡಿತರಾಗುತ್ತಿದ್ದಾರೆ. ಅವುಗಳ ಪೈಕಿ ಸುಮಾರು 5 ಲಕ್ಷ ರೋಗಿಗಳಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಅಗತ್ಯ. ವಿಚಿತ್ರವೆಂದರೆ ಕಾಯಿಲೆಗೆ ತುತ್ತಾಗುವವರಲ್ಲಿ ಶೇ.95 ರಷ್ಟು ಜನ 14 ವರ್ಷದೊಳಗಿನ ಮಕ್ಕಳು ಎಂಬುದು ಭಯವನ್ನು ಹುಟ್ಟಿಸುತ್ತದೆ. ಈ ರೋಗದ ಪ್ರಸಾರದಲ್ಲಿ ಈಡಿಸ್ ಈಜಿಪ್ಟ್ ಸೊಳ್ಳೆಯು ಪ್ರಮುಖ ಪಾತ್ರ ವಹಿಸುತ್ತದೆ. ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆ, ಪಟ್ಟಣಗಳು ಬೇಕಾಬಿಟ್ಟಿ ಬೆಳೆಯುತ್ತಿರುವುದು. ಅವ್ಯವಸ್ಥಿತ ನೀರಿನ ನಿರ್ವಹಣೆ. ರಸ್ತೆಯಲ್ಲಿನ ಗುಂಡಿ, ನೀರು ಸಂಗ್ರಹವಾಗುವಂಥಹ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಪರಿಸರ ಮಲಿನಗೊಳಿಸುವ ಉದ್ಯಮಗಳು, ದೇಶವಿದೇಶಗಳ ನಡುವಿನ ಜನ ಸಂಚಾರ…ಡೆಂಗ್ಯೂ ಹರಡಲು ಮತ್ತು ಡೆಂಗ್ಯೂ ರೋಗ ಹರಡಿಸುವ ಈ ಸೊಳ್ಳೆಗಳ ವಂಶಾಭಿವೃದ್ಧಿಗೆ ಮುಖ್ಯ ಕಾರಣಗಳಾಗಿವೆ. ಏರುತ್ತಿರುವ ಜಾಗತಿಕ ತಾಪಮಾನದಿಂದ ಈ ಸೊಳ್ಳೆಯ ಜೀವಿತಾವಧಿಯು ಹೆಚ್ಚಾಗುತ್ತದೆ. ಈ ಕಾರಣ ಡೆಂಗ್ಯೂ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿವೆ. ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳ ತನಕ ಭಾರತದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ.
ರೋಗದ ಲಕ್ಷಣಗಳು :
ರೋಗದ ಅದಿಶಯನ ಕಾಲ 2 – 15 ದಿನಗಳು, ಆರಂಭಿಕ ಲಕ್ಷಣವೇ ಜ್ವರ. ಏಳೆಂಟು ದಿನಗಳವರೆಗೆ ಮುಂದುವರಿಯುವ ಜ್ವರದ ಪ್ರಮಾಣ 38 ಡಿಗ್ರಿ ಸೆಲ್ಸಿಯಸ್ ರಿಂದ 40 ಡಿಗ್ರಿ ಸೆಲ್ಸಿಯಸ್. ಹಗಲು ರಾತ್ರಿ ಎನ್ನದೇ ಒಂದೇ ಸಮನೆ ಪೀಡಿಸುತ್ತದೆ. ಸಹಿಸಲಸಾಧ್ಯವಾದ ತಲೆನೋವು, ಮೈ ಕೈ ನೋವು, ಮೂಳೆ ಕೀಲುಗಳ ನೋವು, ಮಾಂಸಖಂಡಗಳ ನೋವು ಕಾಣಿಸಿಕೊಂಡು ಯಮಯಾತನೆ ನೀಡುತ್ತವೆ. ರೋಗಿ ನಿತ್ರಾಣವಾಗಿ ಹಾಸಿಗೆ ಹಿಡಿಯುತ್ತಾನೆ. ಮೂಳೆಗಳೆಲ್ಲಾ ಮುರಿದು ಹೋಗುತ್ತಿವೆಯೇನೋ ಎನ್ನುವಷ್ಟು ಪ್ರಮಾಣದಲ್ಲಿ ನೋವು ಕಾಣುವುದು ಇದರ ಲಕ್ಷಣ. ಹೀಗಾಗಿ ಈ ಕಾಯಿಲೆಗೆ ‘ಮೂಳೆ ಮುರಿತ ಜ್ವರ ಎಂದೂ ಹೇಳುತ್ತಾರೆ. ಕೆಲವರಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಮತ್ತೆ ಕೆಲವರಲ್ಲಿ ರಕ್ತರಸ ಇಂಗಿ ಆಘಾತಕ್ಕೊಳಗಾಗಿ ಅವರು ಸಾವಿನಂಚಿಗೆ ತಲುಪಬಹುದು. ಒಟ್ಟಾರೆ ಹೇಳಬೇಕೆಂದರೆ ಡೆಂಗ್ಯೂ ಜ್ವರದ ಆಯಾಮ ಹಲವು ಸ್ತರಗಳಲ್ಲಿ ಪ್ರಕಟವಾಗುತ್ತದೆ.
ಕಡಿಮೆಯಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ. ಡೆಂಗ್ಯೂ ಜ್ವರ ನಿಂತ ನಂತರದ ಎರಡು ಮೂರು ದಿನಗಳು ರೋಗಿಯ ಆರೋಗ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ದಿನಗಳಾಗಿರುತ್ತವೆ. ಶೇ.90 ರಷ್ಟು ಜನರು ಯಾವುದೇ ಚಿಕಿತ್ಸೆಯಿಲ್ಲದೆ ಸುಧಾರಿಸಿಕೊಳ್ಳಬಲ್ಲರು. ಆದರೆ ಉಳಿದವರ ದೇಹದಲ್ಲಿ ರಕ್ತನಾಳಗಳು ರಕ್ತವನ್ನು ಒಳಗಡೆ ಹಿಡಿದಿಟ್ಟುಕೊಳ್ಳುವುದರಲ್ಲಿ ವಿಫಲವಾಗುವ ಕಾರಣ, ಅಂತಹ ರೋಗಿಗಳಲ್ಲಿ ರಕ್ತದೊತ್ತಡ ತೀವ್ರಗತಿಯಲ್ಲಿ ಕುಸಿಯಬಹುದು. ರಕ್ತನಾಳಗಳ ಸೋರಿಕೆಯ ಜೊತೆ ಜೊತೆಗೆ ಪ್ಲೇಟ್ಲೆಟ್ ಕಣಗಳು ಕಡಿಮೆ ಆಗುವುದರಿಂದ ದೇಹದೊಳಗೆ ರಕ್ತಸ್ರಾವವಾಗಬಹುದು. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಯಕೃತ್ ಸಂಬಂಧಿ ಕಾಯಿಲೆಗಳನ್ನು ಹೊಂದಿರುವವರು, ಗರ್ಭಿಣಿಯರು ಮತ್ತು ಚಿಕ್ಕಮಕ್ಕಳಲ್ಲಿ ಡೆಂಗ್ಯೂ ಹೆಚ್ಚು ಮಾರಣಾಂತಿಕವಾಗಬಲ್ಲುದು.
ಕಣ್ಣಿನ ಹಿಂಬದಿಯಲ್ಲಿ ನೋವು, ಸ್ನಾಯು ಮತ್ತು ಗಂಟಲು ನೋವು, ಮೈಮೇಲೆ ದದ್ದು, ವಾಕರಿಕೆ, ವಾಂತಿ, ಈ ರೋಗದಿಂದ ಬಾದಿತವಾದ ಗರ್ಭಿಣಿ ಮಹಿಳೆಯಿಂದ ಆಕೆಯ ಮಗುವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅವಧಿಗೂ ಮುನ್ನ ಜನನ, ಶಿಶುವಿನ ತೂಕ
ಈ ವರ್ಷದ ಸಾಂಕ್ರಾಮಿಕ ಸ್ಲಮ್ಗಳಿಂದ ಸ್ಪೋಟಗೊಂಡಿಲ್ಲವೆಂಬುದು ಸಮೀಕ್ಷೆಗಳಿಂದ ಸ್ಪಷ್ಟವಾಗಿದೆ. ಮಧ್ಯಮ ವರ್ಗದವರ ನೆರವಿನಿಂದ ಈಡಿಸ್ ಈಜಿಪ್ಟ್ ಸೊಳ್ಳೆಯು ನಿರಾತಂಕವಾಗಿ ಬೆಳೆದಿದೆ. ಬೆಂಗಳೂರಲ್ಲಿ ಈ ಸಲ ಬೇಸಿಗೆ ಬೆಂಕಿಯಾಗಿತ್ತು. ಮಧ್ಯಮ
ವರ್ಗದವರಿಗೆ ನುಂಗಲಾರದ ತುತ್ತಾಗಿತ್ತು. ಹವಾನಿಯಂತ್ರಿತ ವ್ಯವಸ್ಥೆ ಅವರಿಗೆ ಗಗನ ಕುಸುಮವಾಗಿತ್ತು. ಹಾಗಾಗಿ ಕೈಗೆಟಕುವ ಕೂಲರ್ಗಳ ಮೊರೆಹೊಕ್ಕರು. ಬಿಸಿಲಿನ ಬೇಗೆ ನೀಗಿ ಮಳೆಗಾಲ ಬಂತು. ಧೋ ಎಂದು ಮಳೆ ಸುರಿದು ತಂಪು ಹೊತ್ತು ತಂತು. ಜನ ಕೂಲರ್ ಸ್ವಿಚ್ ಆಫ್ ಮಾಡಿದರು. ಕೂಲರ್ಗಳಿಗೆ ಹಾಕಿದ ತಿಳಿನೀರು ಅದರಲ್ಲಿಯೇ ಉಳಿಯಿತು. ಇದು ಸೊಳ್ಳೆಗಳ ಸಂಖ್ಯಾಭಿವೃದ್ಧಿಗೆ ಹಾದಿ ಮಾಡಿತು. ಮನೆಗಳ ಮುಂದೆ ಮನ ಮೋಹಕ ಗಾರ್ಡನ್ ನಿರ್ಮಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಮಧ್ಯಮ ವರ್ಗದವರು ಮನೆಯ ಮುಂದಿನ ಕಟ್ಟೆ, ಕಿಟಕಿಗಳ ಬಳಿ ಮನಿಪ್ಲಾಂಟ್ ಬೆಳೆಸುವ ವ್ಯಾಮೋಹದಿಂದ ಬಾಟಲಿಗಳಲ್ಲಿ ನೀರಿಟ್ಟು ಮನಿಪ್ಲಾಂಟ್ ಅನ್ನು ಬೆಳೆಸುತ್ತಾರೆ. ಈ ತಿಳಿನೀರು ಈಡಿಸ್ ಸೊಳ್ಳೆಗಳಿಗೆ ತತ್ತಿ ಇಡುವ ತಾಣಗಳಾಗಿವೆ. ಹಾಗಾಗಿ ಸೊಳ್ಳೆಗಳ ವಂಶಾಭಿವೃದ್ಧಿಗೆ ಅವಕಾಶವಾಗದಂತೆ ಎಲ್ಲರೂ ಮುಂಜಾಗ್ರತೆ ವಹಿಸಿದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಯಬಹುದು.
ವೈದ್ಯರನ್ನು ಯಾವಾಗ ಕಾಣಬೇಕು ?
ಕೆಲವು ಪ್ರಕರಣಗಳಲ್ಲಿ ರೋಗ ಲಕ್ಷಣ ತೀವ್ರವಾಗಿರುತ್ತವೆ. ಅಂತಹ ಸಮಯದಲ್ಲಿ ವೈದ್ಯರ ಸಲಹೆ ಅಗತ್ಯ. ಸುಮಾರು 20 ಸೋಂಕಿತರಲ್ಲಿ ಒಬ್ಬರಿಗೆ
ಡೆಂಗ್ಯೂ ತೀವ್ರವಾಗಿರುತ್ತದೆ. ಸೂಕ್ತ ಚಿಕಿತ್ಸೆ ಸಕಾಲಕ್ಕೆ ಸಿಗದ ಸಮಯದಲ್ಲಿ ಇವು ಜೀವಕ್ಕೆ ಅಪಾಯ ಒಡ್ಡಬಹುದಾಗಿದೆ.
* ಹೊಟ್ಟೆ ನೋವು
• ಅತಿಯಾದ ವಾಂತಿ
* ರಕ್ತ ವಾಂತಿ ಅಥವಾ ಮಲದಲ್ಲಿ ರಕ್ತ ಕಾಣಿಸಿಕೊಳ್ಳುವಿಕೆ
• ಅತಿಯಾದ ಸುಸ್ತು
* ಮುಂತಾದ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಕಾಣಬೇಕು.
ಉಪಚಾರ ಏನು ?
ಡೆಂಗ್ಯೂ ಜ್ವರಕ್ಕೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ, ರೋಗ ಲಕ್ಷಣಕ್ಕೆ ತಕ್ಕ ಚಿಕಿತ್ಸೆಯನ್ನು ವೈದ್ಯರು ಕೊಡುತ್ತಾರೆ. ಜ್ವರ ಮತ್ತು ನೋವಿಗೆ ಸೂಕ್ತ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ. ಈ ರೋಗಕ್ಕೆ ಹೆಚ್ಚು ವಿಶ್ರಾಂತಿ ಅವಶ್ಯಕ. ಸಾಕಷ್ಟು ದ್ರವ ಆಹಾರ ಸೇವಿಸಬೇಕು. ಪೌಷ್ಟಿಕ ಆಹಾರ ಸೇವನೆ, ನೀರಿನಾಂಶವಿರುವ ಹಣ್ಣು. ಜ್ಯೂಸ್ಗಳ ಸೇವನೆಯಿಂದ ಸುಸ್ತು, ಅಶಕ್ತಿಯನ್ನು ಕಡಿಮೆ ಮಾಡಬಹುದು. ಜ್ವರ ಕಡಿಮೆ ಆದ ಬಳಿಕವೂ ವ್ಯಕ್ತಿ ಮೊದಲಿನ ಸ್ಥಿತಿಗೆ ಮರಳಲು ವಾರಗಳ ಸಮಯವೇ ಬೇಕಾಗುತ್ತದೆ. ಡೆಂಗ್ಯೂ ಜ್ವರಕ್ಕೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳೇ ಈ ರೋಗಕ್ಕೆ ಅತ್ಯುತ್ತಮ ಮದ್ದು. ‘ಯುದ್ಧ ಕಾಲೇ ಶಸ್ತ್ರಾಭ್ಯಾಸ’ ಮಾಡುವುದನ್ನು ಬಿಟ್ಟು ಮುಂಜಾಗ್ರತಾ ಕ್ರಮಗಳನ್ನು ಈಗಲೇ ಕಟ್ಟುನಿಟ್ಟಾಗಿ ಆಚರಣೆಗೆ ತಂದಲ್ಲಿ ಜನರ ಗೋಳಾಟ ತಪ್ಪಿಸಲು ಸಾಧ್ಯವಾದೀತು. ಇದಕ್ಕೆ ಜನರು ಕೂಡ ಸ್ಪಂದಿಸಬೇಕು ಮತ್ತು ಸಹಕರಿಸಬೇಕು. ಏಕಂದರೆ ಡೆಂಗ್ಯೂ ಜ್ವರಕ್ಕೆ ನಿಶ್ಚಿತ ಚಿಕಿತ್ಸೆಯಿಲ್ಲ.
ಮುನ್ನೆಚ್ಚರಿಕೆಯೇ ಮದ್ದು :
ರೋಗಿ – ಸೊಳ್ಳೆ – ಆರೋಗ್ಯವಂತ ಈ ಮೂರು ಕೊಂಡಿಗಳ ಚಕ್ರದಲ್ಲಿಯೇ ಡೆಂಗ್ಯೂ ಕಾಯಿಲೆ ಸುತ್ತುತ್ತದೆ. ಈ ಸರಪಳಿಯ ಕೊಂಡಿಗಳು ಕಳಚಿಕೊಂಡಾಗಲೇ ಈ ರೋಗಕ್ಕೆ ಸುಲಭವಾಗಿ ಕಡಿವಾಣ ಹಾಕಬಹುದು. ಈ ಕಾಯಿಲೆಯ ಹತೋಟಿಗಿರುವ ಪ್ರಬಲ ಅಸ್ತ್ರವೆಂದರೆ ಈಡಿಸ್ ಈಜಿಪ್ಟ್ ಸೊಳ್ಳೆಗಳನ್ನು ನಿಯಂತ್ರಿಸುವುದು ಹಾಗೂ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದೇ ಆಗಿದೆ. ಈಡಿಸ್ ಸೊಳ್ಳೆಗಳ ಸಂತಾನ ಅಭಿವ್ರದ್ಧಿಯಾಗುವ ಅಭಿವೃದ್ಧಿಯಾಗುವುದನ್ನು ತಡೆಯಲು ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.
ಈ ಸೊಳ್ಳೆಗಳು ಮಳೆಗಾಲದಲ್ಲಿ ವ್ಯಾಪಕವಾಗಿರುತ್ತವೆ. ಹಾಗಾಗಿ ತಗ್ಗು ಗುಂಡಿಗಳನ್ನು ಮುಚ್ಚಬೇಕು. ಈ ಕಾಲದಲ್ಲಿ ಸೊಳ್ಳೆಗಳು ಹೆಚ್ಚಾಗದಂತೆ ಖಾಲಿ ಡಬ್ಬ, ಬಾಟಲಿ, ತೆಂಗಿನ ಕರಟ, ಮರದ ಪೊರಟೆ, ಮೊಟ್ಟೆ ಚಿಪ್ಪುಗಳಲ್ಲಿ, ಟ್ಯೂಬ್, ಟಾಯರ್ಗಳಲ್ಲಿಯ ನೀರಿನಲ್ಲಿ ಸೊಳ್ಳೆ ಸಂತತಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಒಟ್ಟಿನಲ್ಲಿ ವಾಸಸ್ಥಳದ ಸುತ್ತ ಮುತ್ತ ನೀರು ನಿಲ್ಲದಂತೆ ನಿಗಾ ವಹಿಸಬೇಕು. ಕೊಳಚೆ ಪ್ರದೇಶಗಳನ್ನು ನಿರ್ಮೂಲನ ಮಾಡಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ
ಅತ್ಯಗತ್ಯ. ಒಳಚರಂಡಿ ಯೋಜನೆಯಿಂದ ನೈರ್ಮಲ್ಯ ಕಾಪಾಡಬೇಕು. ಈ ಕಾರಣದಿಂದ ಡೆಂಗ್ಯೂ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಗಿಂತ ಹೆಚ್ಚಿನ ಜವಾಬ್ದಾರಿ: ನಗರಪಾಲಿಕೆಯ ಮೇಲಿರುತ್ತದೆ.
ಸೊಳ್ಳೆ ಮರಿಗಳ ನಾಶಪಡಿಸಲು ‘ಅರ್ಗಾನೋಫಾಸ್ಪರಸ್ ಕ್ರಿಮಿನಾಶಕ’ ಅಬೇಟ್ (Abate) ಬಳಸಬೇಕು. ಇದು ಸಾಂಕ್ರಾಮಿಕತೆ ತಡೆಗಟ್ಟುವಲ್ಲಿ ಹೆಚ್ಚು ಪ್ರಯೋಜನಕಾರಿ. ಆದರೆ, ಸಾಂಕ್ರಾಮಿಕತೆ ಸ್ಪೋಟಗೊಂಡಾಗ ರೋಗ ಪ್ರಸಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಕೀಟನಾಶಕಗಳ ಸಿಂಪಡಣೆ. ಧೂಳೀಕರಣ ಉಪಯುಕ್ತ. ಇದಕ್ಕಾಗಿ ಮೆಲಾಥಿಯಾನ್ ಅಥವಾ ಸುಮಿಥಿಯಾನ್ ಬಳಸಬೇಕು. ಮನೆಯ ಬಾಗಿಲು ಮತ್ತು ಕಿಟಕಿಗಳಿಗೆ ಸೊಳ್ಳೆಗಳು ಒಳ ನುಗ್ಗದಂತೆ ಜಾಲರಿಗಳನ್ನು ಹಾಕಬೇಕು,
ಸಂಗ್ರಹಿಸಿದ ನೀರಿನಲ್ಲಿ ಸೊಳ್ಳೆ ಸಂತಾನಾಭಿವೃದ್ಧಿಯಾಗುವುದರಿಂದ ಪ್ರತಿ ಎರಡು ದಿನಗಳಿಗೊಮ್ಮೆ ನೀರನ್ನು ಖಾಲಿ ಮಾಡಬೇಕು. ಸೊಳ್ಳೆಯ ಲಾರ್ವಾ ಪಾತ್ರೆಯ ಒಳಭಾಗಕ್ಕೆ ಅಂಟಿಕೊಂಡು ಬೆಳೆಯುವ ಸಾಮರ್ಥ್ಯ ಹೊಂದಿರುವುದರಿಂದ ನೀರು ಸಂಗ್ರಹಿಸುವ ಪಾತ್ರೆ ಹಾಗೂ ತೊಟ್ಟಿಗಳ ಒಳಮೈಯನ್ನು ತಿಕ್ಕಿ ತೊಳೆಯಬೇಕು. ಸಿಮೆಂಟ್ ನಿರ್ಮತ ತೊಟ್ಟಿಯಲ್ಲಿ ಲಾರ್ವಾ ಬೆಳೆಯುವ ಅವಕಾಶ ಹೆಚ್ಚಿರುವುದರಿಂದ ಸೂಕ್ತ ಸ್ವಚ್ಛತಾ ಕ್ರಮಗಳು ಅನಿವಾರ್ಯ. ಹೂದಾನಿ ಅಕ್ಟೋರಿಯಂ, ಕೂಲರ್, ಹವಾನಿಯಂತ್ರಕ ಮೊದಲಾದವುಗಳಲ್ಲಿಯ ನೀರನ್ನು ಕನಿಷ್ಠ ಮೂರು ದಿನಗಳಿಗೊಮ್ಮೆಯಾದರೂ ಬದಲಿಸಬೇಕು.
ನೀರಿನ ಸಂಪರ್ಕ ಇಲ್ಲದಿದ್ದರೂ ಮೂರು ವರ್ಷಗಳವರೆಗೆ ಈಡಿಸ್ ಈಜಿಪ್ಟ್ ಸೊಳ್ಳೆ ಮೊಟ್ಟೆಗಳು ಜೀವಂತವಾಗಿರುತ್ತವೆ. ಮೊಟ್ಟೆಯಿಂದ ಮರಿ ಜನಿಸಲು 10 ರಿಂದ 12 ದಿನಗಳು ಬೇಕು. ಆದರೆ, ಬೇಸಿಗೆಯಲ್ಲಿ ಒಂದೇ ವಾರದಲ್ಲಿ ಮರಿಗಳು ಹೊರಬರುತ್ತವೆ. ಸೊಳ್ಳೆ ಜೀವಿತಾವಧಿ ಒಂದು ತಿಂಗಳಿದ್ದು, ಈ ಅವಧಿಯಲ್ಲಿ ಲಕ್ಷಾಂತರ ಮೊಟ್ಟೆಗಳನ್ನು ಇಡುತ್ತದೆ. ಈಡಿಸ್ ಈಜಿಪ್ಟ್ ಸೊಳ್ಳೆ ತುಂಬಾ ಚಲನಶೀಲವಾಗಿದ್ದು, ಹಗಲು ಕ್ರಿಯಾಶೀಲ. 50 ಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಮನೆಯಲ್ಲಿಯೇ ಇರುವ ಹೆಣ್ಣು ಮಕ್ಕಳು, ವೃದ್ಧರಲ್ಲಿ ರೋಗ ಹರಡುವುದು ಸಾಮಾನ್ಯ.
ಮುಂಜಾಗ್ರತಾ ಕ್ರಮವಾಗಿ ಮಲಗುವಾಗ ಸೊಳ್ಳೆ ಪರದೆಯನ್ನು ಬಳಸುವುದು. ಮೈಗೆ ಸೊಳ್ಳೆ ನಿರೋಧಕ ಮುಲಾಮನ್ನು ಹಚ್ಚಿಕೊಳ್ಳುವುದು. ಸೊಳ್ಳೆ ನಿರೋಧಕ ಘಾಟು ಪದಾರ್ಥಗಳನ್ನು ಬಳಸಿ ಸೊಳ್ಳೆಗಳನ್ನು ಓಡಿಸಬೇಕು. ಸೊಳ್ಳೆಗಳಿರುವವರೆಗೆ ಡೆಂಗ್ಯೂ ಜ್ವರ ತಪ್ಪಿದ್ದಲ್ಲ. ಆದ್ದರಿಂದ ಸೊಳ್ಳೆಗಳನ್ನು ನಿಯಂತ್ರಿಸಿ. ಡೆಂಗ್ಯೂ ಜ್ವರವನ್ನು ಓಡಿಸಬೇಕಿದೆ.